ಬೆಂಗಳೂರು: ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಗುಂಪಿನವರೇ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಕೊಡಿಗೇಹಳ್ಳಿಯ ಚಿನ್ನದಂಗಡಿ ದರೋಡೆ ಯತ್ನದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಸೂರಜ್ ಮಧ್ಯಪ್ರದೇಶದ ಗ್ವಾಲಿಯರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಮಾ.14 ರಂದು ಕೊಡಿಗೇಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ದರೋಡೆಗೆ ನಾಲ್ವರ ಗುಂಪು ಪ್ರಯತ್ನಿಸಿತ್ತು. ಈ ಸಂದರ್ಭದಲ್ಲಿ ದರೋಡೆಕೋರರ ಗುಂಪು ಗುಂಡು ಹಾರಿಸಿತ್ತು.
ಪರಿಣಾಮ ಮಾಲೀಕ ಹಾಗೂ ಕೆಲಸಗಾರರೊಬ್ಬರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಆಗ ಕಳ್ಳರ ಗುಂಪಿನಲ್ಲಿದ್ದ ಓರ್ವ ವ್ಯಕ್ತಿಗೆ ಕೂಡ ಗುಂಡು ತಗುಲಿತ್ತು. ಆರೋಪಿ ಆಶು ಪಂಡಿತ್ ಹಾರಿಸಿದ್ದ ಗುಂಡು ಸೂರಜ್ ಕತ್ತಿಗೆ ತಗುಲಿತ್ತು. ನಂತರ ಜನ ಸೇರುತ್ತಿದ್ದಂತೆ ಆತನನ್ನು ಕರೆದುಕೊಂಡು ಕಳ್ಳರ ಗ್ಯಾಂಗ್ ಪರಾರಿಯಾಗಿತ್ತು.
ಆ ನಂತರ ಕಳ್ಳರ ತಂಡ, ಆಂಧ್ರಪ್ರದೇಶದ ಆನಂತರಪುರಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ಗೆ ಪರಾರಿಯಾಗಿತ್ತು. ಆನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಕೊಡಿಗೇಹಳ್ಳಿ ಪೊಲೀಸರು ಹೇಳಿದ್ದಾರೆ.